ಅವಸರದ ಪತ್ರಿಕೋದ್ಯಮಕ್ಕೆ ಮಾರ್ಗದರ್ಶನ ಅಗತ್ಯ -ಹಿರಿಯ ಪತ್ರಕರ್ತ ರವಿಶಂಕರ್ ಕೆ. ಭಟ್

ತುಮಕೂರು: ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಹಿಂದೆ ಇರದಿದ್ದ ದಾವಂತ, ಅವಸರ ಇಂದು ಮಾಧ್ಯಮಗಳಲ್ಲಿದೆ. ಈಗಿನ ಮಾಧ್ಯಮಗಳಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹರಡುವ ಮಾಧ್ಯಮಗಳೇ ಹೆಚ್ಚಾಗಿವೆ. ಅವಸರದ ಯುಗದ ಪತ್ರಿಕೋದ್ಯಮಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಹಿರಿಯ ಪತ್ರಕರ್ತ ರವಿಶಂಕರ್ ಕೆ. ಭಟ್ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮ ಹಬ್ಬ ಇಂಪ್ರೆಶನ್ 2026 ಅನ್ನು ಮೇ 18 ಸೋಮವಾರದಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾವು ಒಳ್ಳೆಯದಕ್ಕಿಂತ ಕೆಟ್ಟದನ್ನೇ ಸ್ವೀಕರಿಸುವ ಹಂತಕ್ಕೆ ತಲುಪಿದ್ದೇವೆ. ಯಾವುದು ಸತ್ಯ, ಯಾವುದು ಮಿಥ್ಯ ಎಂದು ತಿಳಿಯದ ವಾತಾವರಣವಿದೆ. ನಮ್ಮ ವಿವೇಚನೆಯನ್ನು ಬಳಸಿಕೊಂಡಾಗ ಮಾತ್ರ ನಿಜ ಯಾವುದು ಎಂದು ತಿಳಿಯುತ್ತದೆ. ಇಲ್ಲದಿದ್ದರೆ ನಕಲಿ, ದುರುದ್ದೇಶಪೂರಿತ ಬರವಣಿಗೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.

ನಮ್ಮಿಂದಲೇ ಕನ್ನಡಕ್ಕೆ ಅಪಾಯ ಎದುರಾಗುತ್ತಿದೆ. ಕನ್ನಡವನ್ನು ಒಂದು ವಿಷಯವಾಗಿಯೂ ಓದಲು ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಆತಂಕಕಾರಿ. ಬರವಣಿಗೆಯಲ್ಲಿ ತಪ್ಪುಗಳು ಹೆಚ್ಚಾಗುತ್ತಿವೆ. ನಾವು ಸರಿಯಾದ ರೂಪದಲ್ಲಿ ಕನ್ನಡ ಬಳಸದೆ ಹೋದರೆ ಭಾಷೆಗೆ ಕಂಟಕ ಕಾಯಂ. ಕನ್ನಡದ ಉಳಿವಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಚಾಂಪಿಯನ್ ಟ್ರೋಫಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ, ಪತ್ರಿಕೋದ್ಯಮದಲ್ಲಿ ಭರಪೂರ ಅವಕಾಶಗಳಿವೆ. ಆದರೆ ಅವುಗಳನ್ನು ಬಳಸಿಕೊಳ್ಳಲು ಉತ್ತಮ ಕೌಶಲ್ಯವುಳ್ಳವರ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ತಾವು ಏನಾಗಬೇಕು, ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬ ಸೃಷ್ಟತೆ ಹಾಗೂ ಪೂರ್ವ ಸಿದ್ಧತೆ ಇರಬೇಕು. ಇಂದಿನ ವಿದ್ಯಾರ್ಥಿಗಳ ಓದು ಕೇವಲ ಸಾಮಾಜಿಕ ಮಾಧ್ಯಮಗಳ ಬರಹಗಳಿಗೆ ಸೀಮಿತವಾಗಿದೆ. ಸಾಮಾಜಿಕ ಮಾಧ್ಯಮಗಳ ಸರಿಯಾದ ಬಳಕೆ ತಿಳಿದಿದ್ದರೆ, ಕೇವಲ ಒಂದು ಸಣ್ಣ ಸಾಧನದ ಸಹಾಯದಿಂದ ನೀವೇ ಹೀರೊಗಳಾಗಿ ಬೆಳೆಯಬಹುದು. ನಿಮ್ಮ ಕಣ್ಣಮುಂದೆಯೇ ಸಾಕಷ್ಟು ವಿಷಯಗಳಿವೆ, ಅವುಗಳನ್ನು ಬಳಸಿಕೊಳ್ಳುವ ಕೌಶಲ್ಯ ನಿಮ್ಮ ಕೈಯಲ್ಲಿದೆ ಎಂದರು.

ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ಅವರು ಮಾತನಾಡಿ, “ಸಮಾಜವನ್ನು ರಕ್ಷಿಸುವ ಪ್ರಮುಖ ಸಾಧನವೇ ಮಾಧ್ಯಮ. ಇಂದು ಸಾರ್ವಜನಿಕರಿಗೆ ನ್ಯಾಯ, ಸಮಾನತೆ ಮತ್ತು ರಕ್ಷಣೆ ಸಿಗುತ್ತಿರುವುದಕ್ಕೆ ಮಾಧ್ಯಮಗಳೇ ಕಾರಣ. ದನಿ ಇಲ್ಲದವರ ಧ್ವನಿ ಮಾಧ್ಯಮ ಎಂಬ ಘೋಷವಾಕ್ಯವನ್ನು ಇಂದಿನ ಪತ್ರಿಕೋದ್ಯಮ ಸಾಕಾರಗೊಳಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವರಾದ ಪೆÇ್ರ. ಮೋಹನ್ ಹೆಚ್. ಎಸ್ ಅವರು ಮಾತನಾಡಿ, ಬರಹಗಾರನಿಗೆ 250 ಪದಗಳ ಚೌಕಟ್ಟಿನಲ್ಲಿ ಸುಲಲಿತವಾಗಿ ಬರೆಯುವುದು ಸವಾಲಿನ ಕೆಲಸ. ಇದಕ್ಕೆ ವ್ಯಾಪಕ ಓದು ಮುಖ್ಯ. ಇಂದಿನ ಮಾಧ್ಯಮಗಳಲ್ಲಿ ಶಬ್ದಗಳು ಆವೇಶ ಮತ್ತು ಆಡಂಬರದಿಂದ ಕೂಡಿವೆ. ಅವುಗಳನ್ನು ತಣಿಸುವ ಕೆಲಸವನ್ನು ಭವಿಷ್ಯದ ಪತ್ರಕರ್ತರು ಮಾಡಬೇಕಿದೆ ಎಂದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಕೆ.ವಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸುಲೋಚನಾ ಜಿ. ಎಸ್. ಕಾರ್ಯಕ್ರಮ ನಿರೂಪಿಸಿದರು ಮತ್ತು ವಿಷ್ಣುಧರನ್ ವಂದಿಸಿದರು. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯ ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಸಿದ್ದರು. ಮೊದಲ ದಿನದಂದು ವರದಿಗಾರಿಕೆ, ಟಿವಿ ಸುದ್ದಿ ಪ್ರಸ್ತುತಿ, ರೇಡಿಯೋ ಜಾಕಿ, ಛಾಯಾಗ್ರಹಣ, ಪೆÇೀಸ್ಟರ್ ವಿನ್ಯಾಸ, ಪುಟ್ಟಕಥೆ, ರೀಲ್ಸ್ ಮೇಕಿಂಗ್, ಪೀಸ್ ಟು ಕ್ಯಾಮೆರಾ, ಗುಂಪು ಸ್ಪರ್ಧೆಗಳಾದ ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಗ್ರೂಪ್ ಡ್ಯಾನ್ಸ್ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಇಂದು ಮೇ 19ರ ಮಂಗಳವಾರ ಅಪರಾಹ್ನ 3:00 ಗಂಟೆಗೆ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭ ಜರುಗಲಿದೆ. ಕುಲಪತಿಗಳಾದ ಪೆÇ್ರ. ಎಂ. ವೆಂಕಟೇಶ್ವರಲು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಇಂಡಿಯಾ ಮತ್ತು ಗೌರ್ನಮೆಂಟ್ ಪಾರ್ಟ್‍ನರ್‍ಶಿಪ್ಸ್‍ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಹಾಗೂ ಹೆಡ್ ಶ್ರೀ ಸಂತೋಷ್ ಅನಂತಪುರ ಮತ್ತು ರಾಜ್ಯಮಟ್ಟದ ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿಯ ಸಂಪಾದಕರಾದ ಎಸ್. ನಾಗಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.

Leave a Reply

Your email address will not be published. Required fields are marked *