ಹಲ್ಲು, ವಸಡಿನ ಖಾಯಿಲೆಗಳಿಂದ ದೇಹದ ಆರೋಗ್ಯಕ್ಕೂ ತೊಂದರೆ

ತುಮಕೂರು: ಹಲ್ಲು, ವಸಡು, ದಂತ ಖಾಯಿಲೆಗಳೀಂದ ದೇಹದ ಆರೋಗ್ಯಕ್ಕೂ ತೊಂದರೆಯುಂಟಾಗಲಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವರಾಜ ತಿಳಿಸಿದರು.

ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಭಾಗ್ಯ ಯೋಜನೆ, ಜಿಲ್ಲಾಸ್ಪತ್ರೆ, ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿಂದು ಆಯೋಜಿಸಿದ್ದ ದಂತ ಭಾಗ್ಯ ಸಪ್ತಾಹ ಕಾರ್ಯಕ್ರಮದಡಿ ಕೃತಕ ದಂತಪಂಕ್ತಿ ಜೋಡಣಾ ಶಿಬಿರವನ್ನುದ್ದೇಶಿಸಿ ಮಾತನಾಡಿದ ಅವರು ನಾನು ಆರೋಗ್ಯ ಇಲಾಖೆ ಸೇವೆಗೆ ಸೇರಿದ ಸಂದರ್ಭದಲ್ಲಿ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ವೈದ್ಯರ ಸೇವೆ ಲಭ್ಯವಿರಲಿಲ್ಲ. ಆದರೆ ಈಗ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ದಂತ ವೈದ್ಯರು ಲಭ್ಯವಿದ್ದು, ದಂತ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲ ಸಾಧನ ಸಲಕರಣೆಗಳ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ವೀರಭದ್ರಯ್ಯ ಮಾತನಾಡಿ ಆರೋಗ್ಯ ಇಲಾಖೆಯು ದಂತ ಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿರಂತರವಾಗಿ ದಂತಪಂಕ್ತಿಯನ್ನು ವಿತರಿಸುವ ಕೆಲಸ ಮಾಡುತ್ತಿದೆ. ಹಲ್ಲುಗಳಿಲ್ಲದ ವಯೋವೃದ್ಧರಿಗೆ ಆಹಾರವನ್ನು ಜಗಿದು ತಿನ್ನಲು ದಂತಪಂಕ್ತಿ ಸಹಕಾರಿಯಾಗುತ್ತದೆ. ಯೋಜನೆಯ ಸದುಪಯೋಗ ಪಡೆದ ಫಲಾನುಭವಿಗಳು ತಮ್ಮ ಅಕ್ಕ-ಪಕ್ಕದವರು, ಸ್ನೇಹಿತರು, ಬಂಧುಗಳಿಗೂ ಯೋಜನೆಯ ಪ್ರಯೋಜನದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಬಾಯಿ ಆರೋಗ್ಯದ ನೋಡಲ್ ಅಧಿಕಾರಿ ಡಾ|| ವಿಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶೇ.80ರಷ್ಟು ಜನರಲ್ಲಿ ಹಲ್ಲು, ವಸಡಿನ ಖಾಯಿಲೆಗಳ ಉಲ್ಬಣದಿಂದ ದೇಹದ ಆರೋಗ್ಯದ ಮೇಲೆ ತೊಂದರೆ ಹೆಚ್ಚಾಗುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ 2014-15ರಲ್ಲಿ “ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ”ವನ್ನು ಜಾರಿಗೆ ತಂದಿತು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಸಹ ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ತಿಳಿಸಿದರಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಟಲ್ ಲ್ಯಾಬ್ ವ್ಯವಸ್ಥೆ ಇಲ್ಲದೆ ಅಗತ್ಯ ಸಿಬ್ಬಂದಿ, ದಂತ ವೈದ್ಯರ ಕೊರತೆ ಇದ್ದುದರಿಂದ ರಾಜ್ಯದ 45 ದಂತ ಮಹಾವಿದ್ಯಾಲಯಗಳನ್ನು ಎಂಓಯು ಒಪ್ಪಂದದ ಮೇರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಲಾಯಿತು. ಇದೀಗ ಜಿಲ್ಲಾಸ್ಪತ್ರೆಗಳಲ್ಲಿಯೂ ದಂತ ಪ್ರಯೋಗಾಲಯಗಳನ್ನು ತೆರೆದು ದಂತ ಜೋಡಣೆಯನ್ನು ಮಾಡಲಾಗುತ್ತಿದೆ ಎಂದರು.

ದಂತಭಾಗ್ಯ ಯೋಜನೆಯಡಿ 45 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ 3ಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ ಮಾತ್ರ ದಂತಪಂಕ್ತಿಯನ್ನು ನೀಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶಿಫಾರಸ್ಸು ಮಾಡಿದವರಿಗೆ ಮಾತ್ರ ಎಂಓಯು ಒಪ್ಪಂದದ ಪ್ರಕಾರ ಜಿಲ್ಲಾಸ್ಪತ್ರೆ ಹಾಗೂ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ದಂತಪಂಕ್ತಿಯನ್ನು ನೀಡಲಾಗುವುದು. ಈವರೆಗೂ 1500 ಫಲಾನುಭವಿಗಳಿಗೆ ದಂತಪಂಕ್ತಿಯನ್ನು ವಿತರಿಸಲಾಗಿದೆ. ಜಿಲ್ಲಾಸ್ಪತ್ರೆಯಿಂದ 2018-19ರಲ್ಲಿ ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ದಂತಪಂಕ್ತಿಗಳನ್ನು ಫಲಾನುಭವಿಗಳಿಗೆ ವಿತರಿಸಿರುವುದರಿಂದ “ಉತ್ತಮ ದಂತ ಪ್ರಯೋಗಾಲಯ” ಎಂಬ ಪ್ರಶಸ್ತಿ ಲಭಿಸಿತ್ತು ಎಂದು ತಿಳಿಸಿದರು.

ದಂತಪಂಕ್ತಿ ಅಳವಡಿಸಿಕೊಂಡ ನಂತರ ನೀರು ಕುಡಿಯುವ, ಆಹಾರ ಜಗಿಯುವ, ಮಾತನಾಡುವ, ಉಗುಳು ನುಂಗುವ ವಿಧಾನವನ್ನು ಕಲಿಯಬೇಕು ಎಂದು ಫಲಾನುಭವಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಂಜುನಾಥ ಮಾತನಾಡಿ ಈಬಾರಿ ಉತ್ತಮ ಬಾಯಿಯ ಆರೋಗ್ಯದಿಂದ ಉತ್ತಮ ದೇಹದ ಆರೋಗ್ಯ ಘೋಷವಾಕ್ಯದಡಿ ದಂತ ಭಾಗ್ಯ ಸಪ್ತಾಹವನ್ನು ಆಚರಿಸಲಾಗುತ್ತಿದೆ. ದಂತ ಪಂಕ್ತಿಯ ನಿರ್ವಹಣೆ ಬಹಳ ಮುಖ್ಯ. ದಂತ ಪಂಕ್ತಿ ಬಳಸುವ ವಿಧಾನವನ್ನು ತಜ್ಞರಿಂದ ತಿಳಿದಕೊಂಡು ಉಪಯೋಗಿಸಬೇಕೆಂದು ದಂತಭಾಗ್ಯ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ರೇಖಾ, ಸಿದ್ಧಾರ್ಥ ಮಹಾವಿದ್ಯಾಲಯದ ಹೆಚ್.ಓ.ಡಿ. ಪದ್ಮಜ, ಡಾ|| ನವೀನ, ಡಾ|| ಸ್ಮಿತ ಸೇರಿದಂತೆ, ಫಲಾನುಭವಿಗಳು, ಮತ್ತಿತರರು ಉಪಸ್ಥಿತರಿದ್ದರು.

ನಂತರ 50 ಫಲಾನುಭವಿಗಳಿಗೆ ಕೃತಕ ದಂತ ಪಂಕ್ತಿಗಳನ್ನು ಉಚಿತವಾಗಿ ವಿತರಿಸಲಾಯಿತು.

Leave a Reply

Your email address will not be published. Required fields are marked *