
ತುಮಕೂರು:ಜಿಲ್ಲೆಯಲ್ಲಿ ಬರದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ.ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ.ಆದರೆ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ.ಇದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ.ಪ್ರತಿಯೊಂದಕ್ಕೂ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದಾದರೆ ರಾಜ್ಯ ಸರಕಾರ ಇರುವುದು ಏತಕ್ಕೇ ಎಂದು ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ರಾಜ್ಯ ಸರ್ಕರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಜೆಡಿಎಸ್ ಪಕ್ಷದ ವರಿಷ್ಠರ ತೀರ್ಮಾನದಂತೆ ತುಮಕೂರು ಜಿಲ್ಲೆಯ ಬರಪೀಡಿತ 10 ತಾಲೂಕುಗಳ ಬರ ಅಧ್ಯಯನ ಪ್ರವಾಸವನ್ನು ನವೆಂಬರ್ 09 ರಿಂದ ಆರಂಭಿಸಲಾಗುವುದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ,ಇತ್ತೀಚಗೆ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜೆಡಿಎಸ್ ಮುಖಂಡರು ತಮ್ಮ ತಮ್ಮ ಜಿಲ್ಲೆಯ ಬರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ತಲಾ ಐದು ತಾಲೂಕುಗಳಿಗೆ ಒಂದು ತಂಡದಂತೆ ಎರಡು ತಂಡಗಳನ್ನು ರಚಿಸಿ,ಬರ ಅಧ್ಯಯನ ನಡೆಸಲು ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿದೆ ಎಂದರು.
ನವೆಂಬರ್ 9 ರಂದು ಏಕ ಕಾಲಕ್ಕೆ ಎರಡು ತಂಡಗಳು ಬರ ಅಧ್ಯಯನ ನಡೆಸಿ,ನವೆಂಬರ್ 15 ರಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಬರ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲು ಆಗ್ರಹಿಸಲಾಗುವುದು ಎಂದರು
ಎಲ್ಲಾ ತಾಲ್ಲೂಕುಗಳಿಂದ ನಮ್ಮ ಪಕ್ಷದಿಂದ ಬರ ಅಧ್ಯಯನದ ವರದಿಯನ್ನು ಕ್ರೂಡೀಕರಿಸಿ ನವೆಂಬರ್ 15 ರಂದು ಹಿರಿಯ ಮುಖಂಡರೊಂದಿಗೆ ಸೇರಿ ಜಿಲ್ಲಾಧಿಕಾರಿಗಳಿಗೆ,ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದು ಆರ್.ಸಿ. ಅಂಜನಪ್ಪ ತಿಳಿಸಿದರು.
ಜಿಲ್ಲಾಡಳಿತ ನೀಡಿರುವ ವರದಿ ಪ್ರಕಾರ ಜಿಲ್ಲೆಯ ಸುಮಾರು 2.19ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಿದ್ದು,ಇದರಲ್ಲಿ ಶೇ90ರಷ್ಟು ಬೆಳೆ ಸಂಪೂರ್ಣ ಹಾನಿಯಾಗಿದೆ.1880 ಕೋಟಿ ರೂ ನಷ್ಟವಾಗಿದೆ.ಆಹಾರ ಬೆಳೆಗಳಾದ ರಾಗಿ, ಜೋಳ,ಶೇಂಗಾ, ತೊಗರಿ, ಅವರೆ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳು ನಷ್ಟವಾಗಿವೆ ಎಂದು ತಿಳಿಸಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ,ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದಿದ್ದು,ಇದುವರೆಗೂ ಅಭಿವೃದ್ದಿಗೆ ಒಂದು ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಪಕ್ಷದ ಐದು ಗ್ಯಾರಂಟಿಗಳ ಸರಿದೂಗಿಸಲು ಹೋಗಿ ಜನರ ಸಮಸ್ಯೆಗಳನ್ನು ನಿರ್ಲಕ್ಷ ಮಾಡಿದೆ. ಬರ ಪರಿಹಾರವನ್ನು ಕೇಂದ್ರದ ಬಳಿ ಪಟ್ಟು ಹಿಡಿದು ಕೇಳುವ ಬದಲು ಶೋಕಿಗಾಗಿ ಮುಖ್ಯಮಂತ್ರಿ ಮತ್ತು ಕೆಲ ಸಚಿವರು ದೆಹಲಿ ಪ್ರವಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನವೆಂಬರ್ 09 ರಿಂದ ನಡೆಯುವ ಬರ ಅಧ್ಯಯನ ಪ್ರವಾಸದ ವೇಳೆ ಅಯಾಯ ಭಾಗದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು,ವಿ.ಎ, ಆರ್.ಐ ಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಿ,ವಸ್ತುನಿಷ್ಠ ವರದಿಯನ್ನು ತಯಾರಿಸಿ,ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಸಲ್ಲಿಸಿ,ಎನ್,ಡಿ.ಆರ್.ಎಫ್ ನಿಯಮದ ಅನ್ವಯ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಿಯೋಗ ಹೋಗಿ ಒತ್ತಾಯಿಸಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಡಿ.ನಾಗರಾಜಯ್ಯ,ಮುಖಂಡರಾದ ಕೆ.ಟಿ.ಶಾಂತಕುಮಾರ್,ಗುಬ್ಬಿಯ ನಾಗರಾಜು, ಕಾರ್ಯಾಧ್ಯಕ್ಷ, ಟಿ.ಆರ್,ನಾಗರಾಜು, ಗಂಗಣ್ಣ, ನಗರಾಧ್ಯಕ್ಷ ವಿಜಯಗೌಡ,ಮಧು,ತಾಹೀರಾಭಾನು ಸೇರಿದಂತೆ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.