ಜಯನಗರ ಬಡಾವಣೆ ಸಮಸ್ಯೆಗಳನ್ನು ಆಯುಕ್ತರಿಗೆ ಇಂಚಿಂಚು ಬಿಡಿಸಿಟ್ಟ ಮುರಳೀಧರ ಹಾಲಪ್ಪ

ತುಮಕೂರು: ಜಯನಗರ ಪೂರ್ವ ಹಾಗೂ ಪಶ್ಚಿಮ ಬಡಾವಣೆಗಳ ನಾಗರೀಕರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅವರ ಬಳಿ ವಾರ್ಡಿನ ಸಮಸ್ಯೆಗಳನ್ನು ಇಂಚಿಂಚು ಬಗ್ಗೆ ಗಮನ ಸೆಳೆದಾಗ ಅವರು ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯ ಜೊತೆಗೂಡಿ ಮಹಾನಗರ ಪಾಲಿಕೆ ಆಯುಕ್ತರನ್ನು ಸೋಮವಾರ ಸ್ಥಳಕ್ಕೆ ಆಹ್ವಾನಿಸಿ ಸಮಸ್ಯೆಗಳನ್ನು ಇಂಚಿಂಚು ಬಿಡಿಸಿ, ಈ ಸಮಸ್ಯಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಸೋಮವಾರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಜಯನಗರ ವಿವಿಧ ಬಡಾವಣೆಗಳ ನಾಗರೀಕರು ದೂರುಗಳ ಸುರಿಮಳೆಗೈದರು.

ಮೊದಲಿಗೆ ಜಯನಗರ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ನಾಗರಕಟ್ಟೆಗೆ ಭೇಟಿ ನೀಡಿದಾಗ ನಾಗರಕಟ್ಟೆ ಮುಂಭಾಗ ಬಿದ್ದಿದ್ದ ಕಸದ ರಾಶಿ ಅವರ ಕಣ್ಣಿಗೆ ರಾಚುತ್ತಿತ್ತು. ಆ ಕಸದ ರಾಶಿಯ ಬಗ್ಗೆ ಸಾರ್ವಜನಿಕರು ಅಯುಕ್ತರಿಗೆ ತೋರಿಸಿ ಇಂತಹ ಕಸದ ರಾಶಿಗಳು ಈ ಭಾಗದ ಪ್ರತಿಯೊಂದು ಬಡಾವಣೆಯಲ್ಲೂ ಇದ್ದು ಅಸ್ವಚ್ಚತೆ ತಾಂಡವವಾಡುತ್ತಿದೆ ಎಂದು ದೂರಿದರು.

ಅದೇ ರೀತಿ ಜಯನಗರ ಪೂರ್ವ ಬಡಾವಣೆಯ 3 ನೇ ಮುಖ್ಯ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಿ ಡಾಂಬರು ಹಾಕದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ನೃಪತುಂಗ ಬಡಾವಣೆಯ 3 ನೇ ಮುಖ್ಯರಸ್ತೆ, 5 ನೇ ಅಡ್ಡರಸ್ತೆಯಲ್ಲಿ ಖಾಸಗಿ ನಿವೇಶನದಲ್ಲಿ ಕಸದ ರಾಶಿ ಹಾಗೂ ಗಿಡಗೆಂಟೆಗಳು ಬೆಳೆದಿವೆ ಅದನ್ನು ಸ್ವಚ್ಚಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.

ನಂತರ ಜಯನಗರ ಮುಖ್ಯರಸ್ತೆಯಲ್ಲಿ ಚರಂಡಿ ವ್ಯವಸ್ಥೆ, ಹಾಗೂ ಜಯನಗರ ಪಶ್ಚಿಮ ಬಡಾವಣೆಯ 1 ನೇ ಮುಖ್ಯರಸ್ತೆಯಲ್ಲಿ ರಾಜಗಾಲುವೆ ದೊಡ್ಡ ಚರಂಡಿ ಇಕ್ಕೆಲಗಳಲ್ಲಿ ಮಣ್ಣು ಕುಸಿದು ಬಿದ್ದಿದೆ. ತೆರೆದ ಈ ಚರಂಡಿಯಿಂದ ದುರ್ವಾಸನೆ ಬೀರುತ್ತಿದ್ದು, ನಾಗರೀಕರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಅನಿರ್ವಾತೆ ಎದುರಾಗಿದೆ ಕೂಡಲೇ ಈ ದೊಡ್ಡ ಚರಂಡಿಯನ್ನು ದುರಸ್ತಿ ಮಾಡಿ ಚರಂಡಿಯ ಮೇಲೆ ಸ್ಲ್ಯಾಬ್ ಗಳನ್ನು ಹಾಕಿ ದುರ್ವಾಸನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ವಾರ್ಡ್ 30ರ ಜಯನಗರ ಪೂರ್ವ ಮತ್ತು ಪಶ್ಚಿಮ ಬಡಾವಣೆಗಳ ಸ್ವಚ್ಚತೆಗೆ ಪೌರಕಾರ್ಮಿಕರ ಕೊರತೆಯಿದ್ದು, ಆಯುಕ್ತರು ಈ ಭಾಗಕ್ಕೆ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಿ ಸ್ವಚ್ಚತೆ ನೀಡಬೇಕು ಜೊತೆಗೆ ಈ ಭಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಯನಗರ ಪಶ್ಚಿಮ ಬಡಾವಣೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ಠಾಣೆಯನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದ ಅವರು, ಖಾಲಿ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳದ ಮಾಲೀಕರಿಗೆ ದಂಡ ವಿಧಿಸಿ ಪಾಲಿಕೆಯಿಂದಲೇ ಸ್ವಚ್ಚಗೊಳಿಸುವಂತೆ ಆಗ್ರಹಿಸಿದರು.

ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಆದೇಶದ ಮೇರೆಗೆ ಎಲ್ಲಾ ವಾರ್ಡುಗಳಿಗೂ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ಮುಂದಾಗಿರುವುದಾಗಿ ತಿಳಿಸಿದ ಅವರು, ನವೆಂಬರ್ 15 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಐದಾರು ವಾರ್ಡುಗಳನ್ನು ಸೇರಿಸಿ ಜನಸ್ಪಂಧನಾ ಕಾರ್ಯಕ್ರಮ ಹಮ್ಮಿಕೊಂಡು ಆಯಾ ವಾರ್ಡಿನ ಸಮಸ್ಯೆಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಮುರಳೀಧರ ಹಾಲಪ್ಪ ತಿಳಿಸಿದರು.

ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸಿದ ಆಯುಕ್ತೆ ಬಿ.ವಿ. ಅಶ್ವಿಜ ಅವರು, ಈ ಭಾಗದ ನಾಗರೀಕರು ಹಲವಾರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದಾರೆ. ಜೊತೆಗೆ ನಾನು ಇಂದು ಖುದ್ದು ಭೇಟಿ ಮಾಡಿ ವೀಕ್ಷಣೆ ಮಾಡಿದ್ದು, 2.5ಕಿ.ಮೀ. ರಸ್ತೆಯಲ್ಲಿ ಜೆಲ್ಲಿ ಹಾಕಿ ತಿಂಗಳುಗಳೇ ಕಳೆದಿವೆ ಎಂದು ದೂರುಗಳು ಬಂದಿದ್ದು, ಪಿಡಬ್ಲ್ಯೂಡಿ ಇಂಜಿನಿಯರುಗಳ ಬಳಿ ಮಾತನಾಡಿದ್ದು, ಇನ್ನೆರಡು ಮೂರು ದಿನಗಳಲ್ಲಿ ಆ ರಸ್ತೆಯನ್ನು ದುರಸ್ಥಿಗೊಳಿಸುತ್ತೇವೆಂದು ಹೇಳಿದ್ದಾರೆ ಎಂದರು.

ಜಯನಗರ ಪಶ್ಚಿಮ ಬಡಾವಣೆಯ 1ನೇ ಮುಖ್ಯರಸ್ತೆ 2ನೇ ಅಡ್ಡರಸ್ತೆಯಲ್ಲಿರುವ ಪಾರ್ಕ್‍ನ್ನು ನಾಗರೀಕ ಸಮಿತಿಯವರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ. ಪಾರ್ಕ್‍ನಲ್ಲಿ ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸೊಳ್ಳೆಗಳ ನಿಯಂತ್ರಣಕ್ಕೆ ಈಗಾಗಲೇ ವಿವಿಧ ವಾರ್ಡುಗಳಲ್ಲಿ ಫಾಗಿಂಗ್ ಮಾಡಲಾಗುತ್ತಿದ್ದು, ಈ ವಾರ್ಡಿನಲ್ಲಿ ಇಂದಿನಿಂದಲೇ ಫಾಗಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಡುಗೆ ಮನೆಯಿಂದ ಉತ್ಪತ್ತಿಯಾಗುವ ವ್ಯರ್ಥ ನೀರನ್ನು ಚರಂಡಿಗಳಿಗೆ ನೇರವಾಗಿ ಬಿಡುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಆದ್ದರಿಂದ ವಾರ್ಡ್ ನಂ.12 ರಲ್ಲಿ ನಾಗರೀಕರಿಗೆ ಈ ಬಗ್ಗೆ ಅರಿವು ಮೂಡಿಸಲು ಮೆಗಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪಾಲಿಕೆಯಲ್ಲಿ ಪೌರಕಾರ್ಮಿಕ ಕೊರತೆಯಿದ್ದು, 87 ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಸರ್ಕಾರದಿಂದ ಆದೇಶ ಬಂದಿದ್ದು, ಅದರ ಪ್ರಕಾರ ನಾವು ನೇಮಕಾತಿ ಮಾಡಿಕೊಳ್ಳಲಾಗುವುದು. ಇನ್ನೇ ಹೆಚ್ಚುವರಿ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಮತ್ತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಯಿಮಂದಿರ ಅಧ್ಯಕ್ಷ ಮಹದೇವಪ್ಪ, ಜಯನಗರ ನಾಗರೀಕರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವೀರಪ್ಪದೇವರು, ಉಪಾಧ್ಯಕ್ಷರಾದ ಬಸವರಾಜಯ್ಯ, ದ್ವಾರಕನಾಥ್, ಉದ್ಯಾನವನ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ, ನಾಗರೀಕರ ಸಮಿತಿಯ ಮಾರ್ಗದರ್ಶಕ ನಾಗರಾಜ್ ರಾವ್, ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ್, ಪುಟ್ಟರುದ್ರಯ್ಯ, ಗೋಪಾಲಕೃಷ್ಣ, ಪಾಲಿಕೆ ಸದಸ್ಯ ಸಿ.ಎನ್.ರಮೇಶ್, ಸ್ಥಳೀಯರಾದ ವಸುಂಧರ, ಅಂಬಾ, ಮಂಜುಳ, ಚಿಕ್ಕತಾಯಮ್ಮ, ಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮಹಾಲಕ್ಷ್ಮೀ ಮುಂತಾದವರಿದ್ದರು

Leave a Reply

Your email address will not be published. Required fields are marked *