ಜೆಡಿಎಸ್-ಕಾಂಗ್ರೆಸ್‍ಗೆ ಬಲು ಪ್ರಿಯ-ಪಂಚವಾರ್ಷಿಕ (ಪಕ್ಷಾಂತರಿ) ನಿಂಗಪ್ಪ
ಜೀವನ ಪೂರ್ತಿ ಜೆಡಿಎಸ್‍ನಲ್ಲೇ ಇರುವುದಾಗಿ ಹೆಚ್‍ಡಿಕೆಗೆ ನೀಡಿದ್ದ ವಾಗ್ಧಾನ ಎಲ್ಲಿ ಹೋಯಿತು!

ಜನತಾ ವಿಶ್ಲೇಷಣೆ

ತುಮಕೂರು : ಪ್ರತಿ 5 ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ಹೆಚ್.ನಿಂಗಪ್ಪನವರು 2004ರಲ್ಲಿ ಶಾಸಕರಾದ ಮೇಲೆ ಎಷ್ಟು ಕೆಲಸ ಮಾಡಿದರೋ-ಬಿಟ್ಟರೋ ಗೊತ್ತಿಲ್ಲ, ಆದರೆ ಪ್ರತಿ ಸಲ ವಿಧಾನಸಭಾ ಚುನಾವಣೆ ಬಂದಾಗ ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯೇ ಅವರ ಚುನಾವಣಾ ಗಿಮಿಕ್ಕು ಎಂದು ಕೇಳಿ ಬರುತ್ತಿದೆ.

ಹೆಚ್.ನಿಂಗಪ್ಪನವರು ಐದು ವರ್ಷಗಳೊಮ್ಮೆ ಅಥವಾ ಪ್ರತಿ ವಿಧಾನಸಭೆ ಚುನಾವಣೆಗೊಮ್ಮೆ ಜಾಣರಾಗಿ ಬಿಡುತ್ತಾರೆ. ಅವರಿರುವ ಪಕ್ಷದಲ್ಲಿ ಟಿಕೆಟ್ ಸಿಗುತ್ತದೋ ಬಿಡುತ್ತದೋ ಗೊತ್ತಿಲ್ಲ, ಚುನಾವಣೆಯ ಕಾಲದ ತನಕ ಆ ಪಕ್ಷದಲೇ ಇದ್ದು ಚುನಾವಣೆ ಬಂದ ನಂತರ ಬೇರೊಂದು ಪಕ್ಷಕ್ಕೆ ತುಗಲಕ್ ರಾಜಧಾನಿ ಬದಲಾಯಿಸುವಂತೆ ಪಕ್ಷ ಬದಲಾಯಿಸುತ್ತಾರೆ.

ಜೆಡಿಎಸ್‍ನಿಂದ ಶಾಸಕರಾಗಿ ಸೋಲುಂಡ ನಂತರ ಗ್ರಾಮಾಂತರದಲ್ಲಿ ಜೆಡಿಎಸ್ ಟಿಕೆಟ್ ಸಿಗದ ಕಾರಣ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ದಿಂದ ಸ್ಪರ್ಧಿಸಿ ಬಿ.ಸುರೇಶ್‍ಗೌಡರ ಎದುರು ಪರಾಭವಗೊಂಡರು.

ತದ ನಂತರ ಯಡಿಯೂರಪ್ಪನವರು ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸದ ನಂತರ ಕಾಂಗ್ರೆಸ್‍ನತ್ತ ಮುಖ ಮಾಡಿದರು. ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ತುಮಕೂರು ಗ್ರಾಮಾಂತರದ ಟಿಕೆಟ್ ನೆಪವೊಡ್ಡಿ ಕಾಂಗ್ರೆಸ್ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಆರೋಪ ಮಾಡಿ ಮಾತೃ ಪಕ್ಷÀಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಸೇರ್ಪಡೆಗೊಂಡು, ನಾನು ನನ್ನ ರಾಜಕೀಯ ಜೀವನ ಮುಗಿಯುವವರೆಗೂ ಜೆಡಿಎಸ್‍ನಲ್ಲೇ ಇರುವುದಾಗಿ ವಾಗ್ಧಾನ ಮಾಡಿದರು. ಆದರೆ ನಿಂಗಪ್ಪನವರ ಜೆಡಿಎಸ್ ಸೇರ್ಪಡೆಗೆ ಕುಮಾರಸ್ವಾಮಿಯ ಸಹ ಮತವಿರಲಿಲ್ಲ. ಗೌರಿಶಂಕರ್ ಒತ್ತಡದ ಕಾರಣಕ್ಕಾಗಿ ಸೇರ್ಪಡೆ ಮಾಡಿಕೊಂಡಿದ್ದರು.

ಈಗ 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ 6ತಿಂಗಳಿಗೂ ಕಡಿಮೆ ಇರುವ ವೇಳೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಆರೋಪವನ್ನು ಮಾಡಿ ಕಾಂಗ್ರೆಸ್‍ನತ್ತ ಮುಖ ಮಾಡಲು ಹೊರಟಿದ್ದಾರೆ.

ಈಗಾಗಲೇ ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ನಿಂಗಪ್ಪನವರು ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲ್ಲಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕುಣಿಗಲ್ ಶಾಸಕರಾಗಿ ಆಯ್ಕೆಯಾದ ಹೆಚ್.ನಿಂಗಪ್ಪನವರು ವೈ.ಕೆ.ರಾಮಯ್ಯನವರಂತೆ ಹೋರಾಟ ಮತ್ತು ರಾಜಕೀಯ ಕಟು ನಿಲುವುಗಳನ್ನು ತೆಗೆದುಕೊಂಡು ಕ್ಷೇತ್ರಕ್ಕೆ ಯೋಜನೆಗಳನ್ನು ತರುವಲ್ಲಿ ವಿಫಲರಾದುದಲ್ಲದೆ, ಮಾಜಿ ಸಚಿವ ಡಿ.ನಾಗರಾಜಯ್ಯನವರಂತೆ ರಾಜಕೀಯ ಪಟ್ಟುಗಳನ್ನು ಸಹ ಕಲಿಯದ ಕಾರಣ ರಾಜಕೀಯದಲ್ಲಿ ಯಾರೂ ನಿರೀಕ್ಷಿಸಲು ಆಗದಂತಹ ಹಿನ್ನಡೆಯನ್ನು ಅನುಭವಿಸಿದರು.

ಇಂತಹ ಸಂದರ್ಭದಲ್ಲಿ ನಿಂಗಪ್ಪನವರಿಗೆ ಯಾರು ಹೇಳಿದರೋ ಗೊತ್ತಿಲ್ಲ 2008ರಿಂದ ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರ ಮಾಡುವ ಚಾಳಿ ಹುಟ್ಟಿಕೊಂಡಿತು.

ಈ ರೀತಿ ಪಕ್ಷಾಂತರ ಮಾಡುವುದು ನಿಂಗಪ್ಪನವರು ಗೆಲ್ಲುವುದಕ್ಕಿಂತ ಒಬ್ಬರನ್ನು ಸೋಲಿಸಲು, ಮತ್ತೊಬ್ಬರನ್ನು ಗೆಲ್ಲಿಸಲಷ್ಟೇ ಇವರು ಪಕ್ಷಾಂತರ ಮಾಡುತ್ತಾರೆ, ತಾವು ನಿಲ್ಲುವ ಕ್ಷೇತ್ರದಲ್ಲಿ ಯಾರೋ ಒಬ್ಬರ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ನಿಂಗಪ್ಪನವರು ಕ್ಷೇತ್ರದಲ್ಲಿ ಮತದಾರರನ್ನು ಎಡತಾಕುವುದೇ ಇಲ್ಲ ಎಂಬ ಆರೋಪ ಕೇಳಿ ಬಂದಿವೆ.

ಕಳೆದ 2018ರಲ್ಲಿ ಕಾಂಗ್ರೆಸ್‍ನಲ್ಲಿದ್ದ ನಿಂಗಪ್ಪನವರು ತಮಗೆ ಟಿಕೆಟ್ ಸಿಗುವುದಿಲ್ಲ ಎಂಬದನ್ನು ಅರಿತು ಕಾಂಗ್ರೆಸ್ ನಮ್ಮನ್ನು ಕಡೆಗಣಿಸಿದೆ ಎಂಬ ನೆಪವೊಡ್ಡಿ ಕಾಂಗ್ರೆಸ್ ಬಿಡಲು ಮುಂದಾಗಿದ್ದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ತಂದೆಯ ಆಪ್ತರಾಗಿದ್ದ ಸಿ.ಚನ್ನಿಗಪ್ಪನವರಿಗೆ ಕೊನೆಗಾಲದಲ್ಲಿ ಮಗನಿಗೆ ಗೆಲುವನ್ನು ತಂದು ಕೊಡಬೇಕೆಂಬ ಒಂದೇ ಕಾರಣದಿಂದ ಹೆಚ್.ನಿಂಗಪ್ಪನವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಕರೆ ತಂದರು.

ಜೆಡಿಎಸ್ ಪಕ್ಷಕ್ಕೆ ಹೆಚ್.ನಿಂಗಪ್ಪನವರನ್ನು ಕರೆ ತಂದಿದ್ದರಿಂದ ಅವರ ಬೆಂಬಲಿಗರು ಒಂದಷ್ಟು ಮತದಾರರು ಡಿ.ಸಿ.ಗೌರಿಶಂಕರ್ ಅವರಿಗೆ ಮತ ನೀಡಿದ್ದರಿಂದ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರು ಗೆದು ಗೃಹಮಂತ್ರಿ ಆಗಬೇಕೆಂಬ ಕನಸು 2000 ಮತಗಳಿಂದ ಪರಾಭವಗೊಳ್ಳುವ ಮೂಲಕ ಭಗ್ನವಾಯಿತು.

ಡಿ.ಸಿ.ಗೌರಿಶಂಕರ್ ಗೆದ್ದ ನಂತರ ಹೆಚ್.ನಿಂಗಪ್ಪನವರು ಗೌರಿಶಂಕರ್ ಅವರು ನನ್ನ ಮತದಾರರಿಂದಲೇ ಗೆದಿದ್ದು, ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಬೇಕು ಎಂಬುದನ್ನು ಬಹಿಂರಂಗಾವಾಗಿ ಹೇಳದೆ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಳ್ಳುತ್ತಾ ಬಂದರು.

ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಸಿ.ಗೌರಿಶಂಕರ್ ಅವರು ಯಾರೂ ನಿರೀಕ್ಷೆ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಲ್ಲದೆ, ಕೋವಿಡ್-19 ಸಂದರ್ಭದಲ್ಲಿ ಮನೆ ಮನೆಗೆ ಫುಡ್ ಕಿಟ್‍ಗಳನ್ನು ವಿತರಿಸಿದರು.

ಇದನ್ನೆಲ್ಲಾ ನೋಡುತ್ತಿದ್ದ ಮಾಜಿ ಶಾಸಕ ಬಿ.ಸುರೇಶಗೌಡ ನನಗೆ ಕ್ಷೇತ್ರದಲ್ಲಿ ಹಿನ್ನಡೆಯಾಗುತ್ತಾ ಇದನ್ನು ಅರಿತು ಹೆಚ್.ನಿಂಗಪ್ಪನವರೊಂದಿಗೆ ಖಾಸಗಿ ಮಾತುಕತೆ ನಡೆಸಿ, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮಹೂರ್ತವನ್ನು ಇಡಿಸಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಒಂದು ಕಾಲನ್ನು ಕಾಂಗ್ರೆಸ್ ಬಾಗಿಲಿಗೆ ಇಟ್ಟಿರುವ ನಿಂಗಪ್ಪನವರು ಪಂಚವಾರ್ಷಿಕ ಪಕ್ಷಾಂತರಿ ನಿಂಗಪ್ಪನವರು ಎಂದೇ ಗುರುತಿಸಿಕೊಂಡಿದ್ದು, ಗ್ರಾಮಾಂತರದ ಎರಡು ಮದಗಜಗಳ ಹೋರಾಟದ ಮಧ್ಯೆ ಅಪ್ಪಚ್ಚಿಯಾಗುವುದಕ್ಕಿಂತ ಯಾರನ್ನಾದರೂ ಸೋಲಿಸಲಷ್ಟೇ ಬರುತ್ತಿದ್ದಾರೆ, ನಿಂಗಪ್ಪ ಯಾರನ್ನು ಸೋಲಿಸಲು ಹೊರಟಿದ್ದಾರೆ ಎಂಬುದು ಕೆಲ ತಿಂಗಳಲ್ಲೇ ಬಹಿರಂಗವಾಗಲಿದೆ.

ಈಗಾಗಲೇ ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ ಎಂದು ಅರೋಪಿಸಿ ಪಕ್ಷ ತೊರೆದಿದ್ದ ನಿಂಗಪ್ಪನವರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕರೆ ತರುತ್ತಿರುವುದಾದರೂ ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯುತ್ತಿಲ್ಲ, ನಿಂಗಪ್ಪನವರು ಈಗಾಗಲೇ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದರಿಂದ ತಮ್ಮ ಮತದಾರರನ್ನು ಕಳೆದುಕೊಂಡಿದ್ದು, ಕ್ಷೇತ್ರದಲ್ಲಿ ಇವರ ಬಗ್ಗೆ ಒಲವೇ ಇಲ್ಲದ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ಇವರನ್ನು ಕರೆ ತಂದು ಟಿಕೆಟ್ ನೀಡಲು ಮುಂದಾಗಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಸುರೇಶ್‍ಗೌಡ ಮತ್ತು ಗೌರಿಶಂಕರ್ ಅವರಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಸಿಗುತ್ತಿಲ್ಲವೇ ಅಥವಾ ಒಳ ಒಪ್ಪಂದವೇನಾದರೂ ಆಗಿದೆಯೇ ಎಂದು ಕ್ಷೇತ್ರದ ಮತದಾರರೇ ಮಾತನಾಡಿಕೊಳ್ಳುತ್ತಿದ್ದಾರೆ.

-ಹೆಚ್.ವಿ.ವೆಂಕಟಾಚಲ

Leave a Reply

Your email address will not be published. Required fields are marked *