ಒಳಮೀಸಲಾತಿ ಜಾರಿ-ಪರಿಶಿಷ್ಟ ಜಾತಿಗಳಿಗೆ ಸ್ಪಂದಿಸಿದ ಬಿಜೆಪಿಗೆ ಅಭಿನಂದನೆ-ವೈ.ಹೆಚ್.ಹುಚ್ಚಯ್ಯ

ತುಮಕೂರು:ಮಾದಿಗ ಸಮುದಾಯದ ಸುಮಾರು 4 ದಶಕಗಳ ಹೋರಾಟವಾದ ಒಳಮೀಸಲಾತಿಯನ್ನು ಜಾರಿಗೆ ತರುವ ಮೂಲಕ ಬಿಜೆಪಿ ಪಕ್ಷ ಪರಿಶಿಷ್ಟ ಜಾತಿಯ ಸಂಕಷ್ಟಗಳಿಗೆ ಸ್ಪಂದಿಸಿದೆ ಇದಕ್ಕಾಗಿ ಸರಕಾರಕ್ಕೆ ಅಭಿನಂಧನೆ ಸಲ್ಲಿಸುವುದಾಗಿ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಲ್.ಜಿ.ಹಾವನೂರು ವರದಿ ಅನ್ವಯ ಸ್ಪರ್ಶ ಜಾತಿಗಳು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಂಡ ನಂತರ ಪರಿಶಿಷ್ಟ ಜಾತಿಗಳಲ್ಲಿರುವ ಎಡಗೈ ಸಮುದಾಯಕ್ಕೆ ಬಾರಿ ಅನ್ಯಾಯವಾಗಿತ್ತು. ಇದನ್ನು ಮನಗಂಡ ಮಾದಿಗ ದಂಡೋರ,ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ,ದಸಂಸ ಸೇರಿದಂತೆ ದಲಿತ ಪರ ಸಂಘಟನೆಗಳು ನಿರಂತರ ಹೋರಾಟ ನಡೆಸಿದ್ದರ ಫಲವಾಗಿ ಎಸ್.ಎಂ.ಕೃಷ್ಣ ಸರಕಾರದಲ್ಲಿ ನ್ಯಾ.ಸದಾಶಿವ ಆಯೋಗವನ್ನು ರಚಿಸಿದ್ದರು ಎಂದರು.

ಸಮಿತಿ 2011ರ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ವರದಿ ನೀಡಿದ್ದರೂ ಇದುವರೆಗೂ ಅದನ್ನು ತೆಗೆದು ನೋಡುವ ಸೌಜನ್ಯವನ್ನು ಇದುವರೆಗೂ ಆಡಳಿತ ಮಾಡಿದ ಸರಕಾರಗಳು ಮಾಡಿರಲಿಲ್ಲ.ನಮ್ಮ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ಅಡೆತಡೆಗಳನ್ನು ಮೀರಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಉಪಸಮಿತಿಯ ವರದಿಯನ್ನು ಪಡೆದು, ಅದರಂತೆ ಮಾದಿಗರಿಗೆ ಶೇ6,ಹೊಲೆಯರಿಗೆ ಶೇ5.5,ಸ್ಪರ್ಷ ಜಾತಿಗಳಿಗೆ ಶೇ4.5 ಮತ್ತು ಅಲೆಮಾರಿ ಜಾತಿಗಳಿಗೆ ಶೇ1ರ ಮೀಸಲಾತಿ ವಿಂಗಡಿಸಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ.ಇದಕ್ಕಾಗಿ ಶ್ರಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಸಚಿವ ಸಂಪುಟ ಉಪಸಮಿತಿಯ ಸದಸ್ಯರಾದ ಗೋವಿಂದ ಕಾರಜೋಳ, ಪ್ರಭು ಚೌವಾಣ್ ಹಾಗೂ ಎಲ್ಲಾ ಶಾಸಕರು, ಸಂಸದರಿಗೆ ಅಭಿನಂದನೆ ಸಲ್ಲಿಸವುದಾಗಿ ತಿಳಿಸಿದರು.

ಒಳಮೀಸಲಾತಿ ಜಾರಿಯಿಂದ ಪರಿಶಿಷ್ಟ ಜಾತಿಯಲ್ಲಿರುವ ಬಹುತೇಕ ಮಾದಿಗ ಮತ್ತು ಅದರ ಮಿತ್ರ ಜಾತಿಗಳು ಬಿಜೆಪಿಯನ್ನು ಬೆಂಬಲಿಸಲಿವೆ.ಇದರ ಪರಿಣಾಮ ಜಿಲ್ಲೆಯಲ್ಲಿ 9ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲುವು ನಿಶ್ಚಿತ.ಏಕೆಂದರೆ ನಮ್ಮ ಎಲ್ಲಾ ಹೋರಾಟದಲ್ಲಿ ಸುರೇಶಗೌಡ ಅವರು ಜೊತೆಗಿದ್ದು,ಬೆಂಬಲವಾಗಿ ನಿಂತು ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ.ಇದು ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವೈ.ಹೆಚ್.ಹುಚ್ಚಯ್ಯ ನುಡಿದರು.

ತುಮಕೂರು ಜಿಲ್ಲೆಯ ಮೀಸಲು ಕ್ಷೇತ್ರದಿಂದ ಗೆದ್ದ ಡಾ.ಜಿ.ಪರಮೇಶ್ವರ್ ಆರಂಭದಿಂದಲೂ ಒಳಮೀಸಲಾತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ.ಚುನಾವಣೆ ಸಂದರ್ಭದಲ್ಲಿ ನಾನು ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಡಾ.ಜಿ.ಪರಮೇಶ್ವರ್, ಚುನಾವಣೆ ನಂತರ ಒಳಮೀಸಲಾತಿ ವಿರೋಧಿಸುವವರ ಜೊತೆ ಸೇರಿ ತಮ್ಮದೆ ಸರಕಾರ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಜಾರಿಯಾಗದಂತೆ ನೋಡಿಕೊಂಡರು.ಪ್ರತಿ ಬಾರಿ ಸದನದಲ್ಲಿ ಮಂಡಿಸುವ ಪ್ರಯತ್ನವನ್ನು ಅಂದಿನ ಸಮಾಜ ಕಲ್ಯಾಣ ಸಚಿವರು ಮಾಡಿದಾಗಲೂ ಅವರಿಗೆ ಅಡ್ಡಗಾಲು ಹಾಕುತ್ತಿದ್ದರು.ನರೇಂದ್ರಸ್ವಾಮಿ ಎಂಬ ಶಾಸಕರ ಮೂಲಕ ಸದನದಲ್ಲಿ ಗಲಾಟೆಯನ್ನೇ ಮಾಡಿಸಿದರು.ಈಗ ದಲಿತರ ಮತ ಕೇಳಲು ಇವರಿಗೆ ನಾಚಿಕೆಯಾಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಶಾಸಕ ಗಂಗಹನುಮಯ್ಯ, ಹೆತ್ತೇನಹಳ್ಳಿ ವೆಂಕಟೇಶ್,ಅಂಜನಪ್ಪ,ಯೋಗೀಶ್,ಪಾಪಣ್ಣ,ಶ್ರೀಧರ್,ಗ್ರಾಪಂ.ಸದಸ್ಯರಾದ ಮಂಜುನಾಥ್,ನರಸಯ್ಯ,ರತ್ನಮ್ಮ,ನೀಲಮ್ಮ, ಮುಖಂಡ ರಾದ ನಾರಾಯಣ್, ಪ್ರಭು, ಮೋಹನ್, ನಂಜುಂಡಯ್ಯ, ದೊಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *