ಜ.10: ತುಮಕೂರಿನಲ್ಲಿ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ

ತುಮಕೂರು: ಜನವರಿ 10ರಂದು ತುಮಕೂರಿನಲ್ಲಿ ನಡೆಯುವ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದು ಜನಾಂದೋಲನಗಳ ಮಹಾಮೈತ್ರಿ ರಾಜ್ಯ ಸಂಚಾಲಕ ಎಸ್ ಆರ್ ಹಿರೇಮಠ ಅವರು ತಿಳಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ಮಂಗಳವಾರ ಜನಾಂದೋಲನಗಳ ಮಹಾಮೈತ್ರಿ, ಕರ್ನಾಟಕ, ಸಿಟಿಜನ್ ಫಾರ್ ಡೆಮಾಕ್ರಸಿ, ಜನತಂತ್ರ ಪ್ರಯೋಗ ಶಾಲೆ ಸಂಘಟನೆಗಳ ನೇತೃತ್ವವಹಿಸಿ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಯಶಸ್ವಿಗೊಳಿಸುವ ಸಂಬಂಧ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಬಡಗಲಪುರ ನಾಗೇಂದ್ರ ಮಾತನಾಡಿ, ಸತ್ಯಾಗ್ರಹಿಗಳು ಪ್ರಮಾಣಿಕ ಉದ್ದೇಶ ಇಟ್ಟುಕೊಂಡು ಯಾತ್ರೆ ಮಾಡುತ್ತಿದ್ದು, ಈ ಮೂಲಕ ಸಮಾಜ ಪರಿವರ್ತನೆ ಹಾಗೂ ಸಂಕಷ್ಟಗಳ ನಿವಾರಣೆಯಾಗಲಿದೆ. ಡಬಲ್ ಇಂಜಿನ್ ಸರ್ಕಾರ ಸಂವೇದನೆ ಮತ್ತು ಸೂಕ್ಷ್ಮತೆಗಳನ್ನು ಕಳೆದುಕೊಂಡಿದೆ. ಜನರಿಗೆ ವಾಸ್ತವವನ್ನು ಅರ್ಥ ಮಾಡಿಸಬೇಕಿದೆ. ಹಾಗಾಗಿ ಈ ಯಾತ್ರೆ ಜನವರಿ 2 ರಂದು ಕೂಡಲಸಂಗಮದಿಂದ ಆರಂಭಗೊಂಡು ಬಾದಾಮಿ, ಬಾಗಲಕೋಟೆ, ನರಗುಂದ, ನವಲಗುಂದ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಮತ್ತೊಂದು ಯಾತ್ರೆ ಮಂಗಳೂರು, ಚನ್ನಪಟ್ಟಣ ಮಾರ್ಗವಾಗಿ ಆಗಮಿಸಲಿದೆ. ಈ ಎರಡು ಯಾತ್ರೆ ಜನವರಿ 11ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ಜಾಥಾಗಳ ಸಮಾಗಮ ಸತ್ಯಾಗ್ರಹ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಜನಾಂದೋಲಗಳ ಮಹಾಮೈತ್ರಿಯ ಸಿ.ಯತಿರಾಜು ಮಾತನಾಡಿ, “ಸಮಾಜಪರಿವರ್ತನ ಸತ್ಯಾಗ್ರಹ ಯಾತ್ರೆ ತುಮಕೂರಿಗೆ ಜನವರಿ 10ರಂದು ಆಗಮಿಸುತ್ತಿದ್ದು. ಸತ್ಯಾಗ್ರಹಿಗಳ ಉಸ್ತುವಾರಿಯನ್ನು ಜಿಲ್ಲೆಯ ಜನಾಂದೋಲನಗಳ ಮಹಾಮೈತ್ರಿ, ರಾಜ್ಯ ರೈತಸಂಘ, ಸಂಯುಕ್ತ ಹೋರಾಟ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳು ಜವಾಬ್ದಾರಿವಹಿಸುತ್ತಿವೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜನಾಂದೋಲನಗಳ ಮಹಾಮೈತ್ರಿ ರಾಜ್ಯ ಸಂಚಾಲಕ ಎಸ್ ಆರ್ ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಬಡಗಲಪುರ ನಾಗೇಂದ್ರ ಸೇರಿದಂತೆ ಎನ್.ಎಸ್. ಜವಹರ್, ದೊರೈರಾಜು, ಡಾ.ಯಲ್ಲಪ್ಪ, ತಾಜ್‍ಉದ್ದೀನ್, ನರಸಿಂಹಮೂರ್ತಿ, ಬಿ.ಉಮೇಶ್, ಧನಂಜಯ್ ಆರಾಧ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *