4 ವರ್ಷದಿಂದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನೇ ಕೊರೆಸದ ಪ.ಜಾ, ಪ.ವ.ನಿಗಮಗಳು-ಶಾಸಕ ಬಿ.ಸುರೇಶಗೌಡ

ತುಮಕೂರು:ರಾಜ್ಯ ಸರಕಾರದ ವಿವಿಧ ಅಭಿವೃದ್ದಿ ನಿಗಮಗಳಾದ ಪರಿಶಿಷ್ಟ ಜಾತಿ,ವರ್ಗ,ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಗಳಲ್ಲಿ ಕಳೆದ ನಾಲ್ಕು ವರ್ಷದಿಂದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿ ಕೊರೆದಿಲ್ಲ. ಹಲವಾರು ಗೊಂದಲ ಮಯ ನಿಯಮಗಳನ್ನು ರೂಪಿಸಿರುವುದೇ ಇದಕ್ಕೆ ಕಾರಣವಾಗಿದ್ದು,ಸರಕಾರ ಕೂಡಲೇ ಅಧಿವೇಶನ ಕರೆದು ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕ ಬಿ.ಸುರೇಶಗೌಡ ಒತ್ತಾಯಿಸಿದ್ದಾರೆ.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಂದು ಕರೆದಿದ್ದ ಅಂಬೇಡ್ಕರ್,ವಾಲ್ಮೀಕಿ,ದೇವರಾಜ ಅರಸು ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು,ನೋ ವಾಟರ್, ನೋ ಮನಿ,ಡಿಪಿಟಿ ಯೋಜನೆಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಒಂದೊಂದು ನಿಗಮದಲ್ಲಿ 2018-19 ನೇ ಸಾಲಿನಿಂದ ಇದುವರೆಗೂ ಅಂದಾಜು ಸಾವಿರಾರು ಕೊಳವೆ ಬಾವಿಗಳ ಕೊರೆಯುವ ಕೆಲಸ ಬಾಕಿ ಇದೆ.ಹೊಸ ಡಿಪಿಟಿ ಯೋಜನೆಯಲ್ಲಿ ಪ್ರತಿ ಹಂತದಲ್ಲಿಯೂ ಫಲಾನುಭವಿ ತನ್ನ ಮೊಬೈಲ್‍ಗೆ ಬರುವ ಓಟಿಪಿ ಹೇಳಿದರೆ ಮಾತ್ರ ಮುಂದಿನ ಹಂತದ ಪ್ರೋಸಸ್ ಆಗುವುದರಿಂದ ಫಲಾನುಭವಿಗಳಿಗೆ ಸಾಕಷ್ಟು ತೊಂದರೆಯಾಗಿದೆ.2020-21 ಮತ್ತು 2021-22 ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಇದುವರೆಗೂ ಫಲ ಸಿಕ್ಕಿಲ್ಲ. ಜೊತೆಗೆ ನೋ ವಾಟರ್-ನೋ ಮನಿ ಯೋಜನೆ ಕುರಿತ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸಾಕಷ್ಟು ತೊಂದರೆಯಾಗಿದೆ ಎಂದರು.

ಕಳೆದ ನಾಲ್ಕು ವರ್ಷಗಳಿಂದಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳು ಜಾತಕ ಪಕ್ಷಿಯಂತೆ ಕಾಯುತಿದ್ದಾರೆ.ಸರಕಾರದ ನಿಯಮಗಳಲ್ಲಿ ಇರುವ ಲೋಪದೋಷ ಸರಿಪಡಿಸದ ಕಾರಣ ಸಾಕಷ್ಟು ತೊಂದರೆಯನ್ನು ಅನುಭವಿಸುತಿದ್ದಾರೆ.ಡಿಪಿಟಿ ಯೋಜನೆಯೂ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳಿವೆ.ಹಾಗಾಗಿ ಮುಖ್ಯಮಂತ್ರಿಗಳು,ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವರಿ ಸಚಿವರು ಕೂಡಲೇ ಅಧಿವೇಶನ ಕರೆದು ಈ ಹಿಂದಿನ ಪದ್ದತಿಯನ್ನೇ ಮುಂದುವರೆಸಲು ಅಗತ್ಯ ಕ್ರಮ ಕೈಗೊಂಡು ಬಡವರು,ದಲಿತರ ನೆರವಿಗೆ ಬರಬೇಕೆಂದು ಸುರೇಶಗೌಡ ಆಗ್ರಹಿಸಿದರು.

ಇಂದು ಬಿಜೆಪಿ ರಾಜ್ಯದಲ್ಲಿ ಸೋಲು ಅನುಭವಿಸಿದ್ದರೆ ಇಂತಹ ವಿಚಾರಗಳಿಂದ. ಯಾವುದೇ ಸರಕಾರವಿರಲಿ ನಾಲ್ಕು ವರ್ಷ ಕಳೆದರೂ ಫಲಾನುಭವಿಗೆ ಸವಲತ್ತು ದೊರೆಯದಿದ್ದರೆ ಯೋಜನೆ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು,ಹಾಲಿ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಅಂಬೇಡ್ಕರ್,ಆದಿ ಜಾಂಭವ,ತಾಂಡ,ಲಂಬಾಣಿ,ಹಿಂದುಳಿದ ವರ್ಗಗಳಿಗೆ ಸೇರಿದ ವಿಶ್ವಕರ್ಮ,ಒಕ್ಕಲಿಗ,ವೀರಶೈವ-ಲಿಂಗಾಯಿತ, ವಾಲ್ಮೀಕಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಲ್ಲಿ 2022-23 ವರ್ಷ ಕೊನೆಗೊಂಡರು ಟಾರ್ಗೇಟ್ ನೀಡಿಲ್ಲ. ಸರಕಾರ ಹಾಗೂ ಸಂಬಂಧಪಟ್ಟ ಸಚಿವರು ಈ ಕೂಡಲೇ ಗಮನಹರಿಸಬೇಕು.ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ತುರ್ತು ಗಮನಹರಿಸಬೇಕೆಂದು ಶಾಸಕ. ಬಿ.ಸುರೇಶಗೌಡ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *