ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮ್ಯಾಚ್ಪಿಕ್ಸಿಂಗ್ನಿಂದ ಜಿಲ್ಲೆಯ ಮಾದಿಗ ಜನಾಂಗಕ್ಕೆ ರಾಜಕೀಯ ಸ್ಥಾನಮಾನಗಳು ಸಿಗದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕರುಗಳು ನೋಡಿಕೊಳ್ಳುತ್ತಿದ್ದಾರೆಂದು ಮಾಜಿ ಶಾಸಕ ಹಾಲಿ ಬಿಜೆಪಿಯ ಮಧುಗಿರಿ ಕೋರ್ ಕಮಿಟಿಯ ಸದಸ್ಯರಾದ ಗಂಗಹನುಮಯ್ಯ ಮತ್ತು ಜಿಲ್ಲಾ ಬಿಜೆಪಿ ಎಸ್.ಸಿ.-ಎಸ್.ಟಿ. ಉಪಾಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯ ಅರೋಪಿಸಿದರು.
ಈಗಾಗಲೇ ಮ್ಯಾಚ್ ಪಿಕ್ಸಿಂಗ್ಗೆ ಕೆಲವರನ್ನು ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನೇ ಅಭ್ಯರ್ಥಿಯೆಂದು ಹೇಳಿಕೊಂಡು ಓಡಾಡಲು ಪಕ್ಷದ ನಾಯಕರುಗಳೇ ಸೂಚಿಸಿದ್ದು, ಇವರಿಗೆ ಟಿಕೆಟ್ ಕೊಡಿಸಲು ಸಹ ಮುಂದಾಗಿದ್ದು, ಇವರು ಬೇರೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಇವರು ಈ ರೀತಿ ಮಾಡುತ್ತಿದ್ದು, ಈ ರೀತಿ ಮಾಡದೆ ಪಕ್ಷಕ್ಕಾಗಿ ದುಡಿಯುತ್ತಿರುವ ಜಿಲ್ಲೆಯ ಮಾದಿಗ ಜನಾಗದವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಜಿಲ್ಲೆಯಲ್ಲಿ 5.50ಲಕ್ಷ ಜನಸಂಖ್ಯೆಯುಳ್ಳ ಮಾದಿಗ ಜನಾಂಗವನ್ನು ಬಿಜೆಪಿ ಪಕ್ಷವು ನಿರ್ಲಕ್ಷಿಸುತ್ತಾ ಇದ್ದು, ಮಾದಿಗ ಜನಾಂಗದಿಂದಲೆ ಗೆಲುವು ಸಾಧಿಸಬೇಕಿದ್ದು, ನಮ್ಮಂತಹ ಹಿರಿಯ ನಾಯಕರನ್ನು ನಂಬಿಸಿ ಪಕ್ಷದ ಹಿರಿಯ ನಾಯಕರುಗಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುವಂತೆ ಪ್ರೇರೇಪಿಸಿ ಗೆಲುವಿನ ನಂತರ ಮಾದಿಗ ಸಮುದಾಯದ ನಾಯಕರಿಗೆ ಯಾವುದೇ ರಾಜಕೀಯ ಸ್ಥಾನಮಾನಗಳು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ನಾವುಗಳು ಪಕ್ಷ ಸಂಘಟನೆಗೆ ಮತ್ತು ಪಕ್ಷದ ಅಭ್ಯರ್ಥಿಗಳು ಗೆಲ್ಲಿಸಲು ಹಗಲು ರಾತ್ರಿ ದುಡಿದಿದ್ದು, ನಾವು ಈಗಾಗಲೇ ರಾಜಕೀಯದಲ್ಲಿ ಶಾಸಕರಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಅಧ್ಯಕ್ಷರಾಗಿ ಪಕ್ಷದ ಸಂಘಟನೆ ಮಾಡುತ್ತಿದ್ದರು ನಮ್ಮಂತಹವರಿಗೆ ರಾಜಕೀಯ ಬಲ ನೀಡಲು ಮುಂದಾಗದೆ ನಮ್ಮನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಾಯಕರುಗಳು ನಡೆಸಿಕೊಳ್ಳುತ್ತಿದ್ದು, ಇದೇ ರೀತಿ ಮುಂಬರುವ ಚುನಾವಣೆಯಲ್ಲಿ ಮಾದಿಗ ಜನಾಂಗವನ್ನು ರಾಜಕೀಯವಾಗಿ ಕಡೆಗಣಿಸಿದರೆ ಅದರ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ ಎಂದರು.
ಕೊರಟಗೆರೆ ಮತ್ತು ಪಾವಗಡ ಕ್ಷೇತ್ರಗಳಿಗೆ ಪಕ್ಷಕ್ಕಾಗಿ ದುಡಿಯುತ್ತಿರುವ ಮತ್ತು ಪಕ್ಷವನ್ನು ಸಂಘಟಿಸುತ್ತಿರುವ ನಮ್ಮಂತಹವರಿಗೆ ಟಿಕೆಟ್ ನೀಡದೆ ಎದುರಾಳಿ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ಅನುಕೂಲ ಮಾಡಿ ಕೊಡುವಂತಹ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ಮುಂದಾದರೆ ಪಕ್ಷವು ಅದರ ಫಲ ಅನುಭವಿಸಬೇಕಾಗುತ್ತದೆ ಎಂದರು.
ಮಾದಿಗ ಜನಾಂಗಕ್ಕೆ ಒಳಮೀಸಲಾತಿ ಜಾರಿ ತರುತೇವೆಂದು ಗೆದ್ದು ಬಂದು ಇಲ್ಲಿಯವರೆವಿಗೂ ಜಾರಿಗೆ ತಂದಿಲ್ಲ, ಈ ಭಾರಿಯೂ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರದಿದ್ದರೆ ಅದರ ಪರಿಣಾಮವನ್ನು ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದರು.
ಜಿಲ್ಲೆಯ ಮಾದಿಗ ಸಮುದಾಯಕ್ಕೆ ಮೀಸಲು ಕ್ಷೇತ್ರದ ಟಿಕೆಟ್ ನೀಡಬೇಕು, ಕೊರಟಗೆರೆ ಮತ್ತು ಪಾವಗಡ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡುತ್ತಾ ಬಂದಿರುವ ಹಿರಿಯ ಮುಖಂಡರಿಗೆ ಟಿಕೆಟ್ ನೀಡಲು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಮಲಗಂಗಹನುಮಯ್ಯ ಉಪಸ್ಥಿತರಿದ್ದರು.